ಕುಂದಾಪುರದಿಂದ ಹೆಜಮಾಡಿವರೆಗಿನ 26 ಕಿ.ಮೀ ಸರ್ವೀಸ್ ರಸ್ತೆ ತುರ್ತು ಕಾಮಗಾರಿ ಆರಂಭಿಸಲು ಸಂಸದ ಕೋಟ ಸೂಚನೆ
ರಾಷ್ಟ್ರೀಯ ಹೆದ್ದಾರಿಯ-66 ರ ಸರ್ವಿಸ್ ರಸ್ತೆಯ ಅಭಿವೃದ್ಧಿ ಮತ್ತಿತರ ಸಮಸ್ಯೆಯ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದರಾದAತ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸಮಕ್ಷಮದಲ್ಲಿ ಇಲಾಖಾ ಮಟ್ಟದ ಸಭೆ ನಡೆಯಿತು. ಜಿಲ್ಲಾಧಿಕಾರಿಯವರ ಕಚೇರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕುಂದಾಪುರದಿಂದ ಹೆಜಮಾಡಿವರೆಗಿನ 26 ಕಿ.ಮೀ ಅನುಮೋದಿತ ಸರ್ವೀಸ್ ರಸ್ತೆಯನ್ನು ತಕ್ಷಣ ಆರಂಬಿಸಲು ಅಧಿಕಾರಿಗಳಿಗೆ ಸಂಸದ ಕೋಟ ಸೂಚನೆ ನೀಡಿದರು.
ಸಂತೆಕಟ್ಟೆ ಮತ್ತು ಕಲ್ಯಾಣಪುರದ ಅಂಡರ್ಪಾಸ್ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆದಿದ್ದು, ಮುಖ್ಯ ರಸ್ತೆಯ ಒಂದು ಬದಿಯ ಭಾಗ ಪೂರ್ಣಗೊಂಡಿದ್ದು, ಇನ್ನೊಂದು ಬದಿಯ ರಸ್ತೆಯು ಮುಗಿಯದ ಬಗ್ಗೆ ಸಂಸದರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರಾದ ಜಾವೇದ್ ಉತ್ತರಿಸಿ ಇನ್ನೊಂದು ಬದಿಯ ರಸ್ತೆಯಲ್ಲಿ ಅಂತರ್ಜಲ ಹೆಚ್ಚಾಗಿ ಮಳೆಗಾಲ ಮುಗಿಯುವ ಮುಂಚೆ ಪ್ರಾರಂಭ ಮಾಡಿದ್ದರೆ ಗುಣಮಟ್ಟದಲ್ಲಿ ಲೋಪವಾಗಿ ರಸ್ತೆಯು ಜರಿಯುವ ಸಂಭವವಿದೆ ಎಂದು ತಿಳಿಸಿ, ಮಳೆಗಾಲ ಮುಗಿಯುವವರೆಗೆ ಅವಕಾಶ ಕೋರಿದರು. ಅಂತರ್ಜಲ ಮಟ್ಟ ಕಡಿಮೆಯಾದ ಕೂಡಲೇ ಇನ್ನೊಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲು ಕೋಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಬಲಪಾಡಿ ಪ್ಲೈಓವರ್ ಮತ್ತು ಇತರ ಪೂರಕ ಕಾಮಗಾರಿಗಳ ಬಗ್ಗೆ ಚರ್ಚೆ ನಡೆದಿದ್ದು, ಅಂಬಲಪಾಡಿಯ ಒಂದು ಜಂಕ್ಷನ್ಬಳಿ ನೀರು ತುಂಬಿದ ಕಾರಣ ವಾಹನ ಸಂಚಾರಕ್ಕೆ ಅಡೆ ತಡೆಯಾಗಿ ಪೋಲಿಸ್ ಅಧಿಕಾರಿಗಳು ಹೊಂಡ ತುಂಬಿಸಿದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವರದಿಯಾದ ಬಗ್ಗೆ ಅಧಿಕಾರಿಗಳನ್ನು ಸಂಸದರು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಚರಂಡಿಯ ನೀರು ನೇರವಾಗಿ ರಸ್ತೆಗೆ ಹರಿದಿದ್ದರಿಂದ ಮಳೆಗಾಲದಲ್ಲಿ ತೀವ್ರವಾಗಿ ಮಳೆ ಸುರಿದಿದ್ದರಿಂದ ಹೊಂಡ ಬಿದ್ದದ್ದು ನಿಜ ಆದರೆ, ಈಗ ಹೊಂಡವನ್ನು ಸಂಪೂರ್ಣವಾಗಿ ಇಂಟರ್ಲಾಕ್ ಮಾದರಿಯಲ್ಲಿ ಮುಚ್ಚಿಸಿದ್ದು, ಪ್ರಸ್ತುತ ಸುಗಮ ಸಂಪರ್ಕಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಮತ್ತು ಅಂಬಲಪಾಡಿ ಪ್ಲೈ ಓವರ್ನ್ನು ಮೇ ಅಂತ್ಯದಲ್ಲಿ ಕಾಮಗಾರಿ ಮಾಡಿ ಮುಗಿಸಲು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸಭೆಗೆ ತಿಳಿಸಿದರು.
ಕಟಪಾಡಿ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸಲುವ ಬಗ್ಗೆ ಅಕ್ಟೋಬರ್ ತಿಂಗಳಲ್ಲಿ ಕೆಲಸ ಆರಂಭಿಸಲು ಸಭೆಗೆ ತಿಳಿಸಿದ್ದು, ಉಳಿದ ಅವಧಿಯಲ್ಲಿ ಸರ್ವಿಸ್ ರಸ್ತೆಯನ್ನು ಸಮರ್ಪಕಗೊಳಿಸಬೇಕು ಮತ್ತು ಕಾಮಗಾರಿ ಪ್ರಾರಂಭಿಸುವ ಮುನ್ನ ಸಾಮಾಗ್ರಿ ಸಂಗ್ರಹಣೆಯನ್ನು ಮಾಡಬೇಕೆಂದು ಸಭೆಗೆ ತಿಳಿಸಿದರು. ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಧರ್ಮಾವರಂ ಆಡಿಟೋರಿಯಂ ವರೆಗೆ ಪ್ಲೈ ಓವರ್ ನಿರ್ಮಾಣ ಮತ್ತು ಸಾಸ್ತಾನ ಗುರುನರಸಿಂಹ ದೇವಸ್ಥಾನದಿಂದ ಆಂಜನೇಯ ದೇವಸ್ಥಾನದ ಎದುರಿಗೆ ಅಂಡರ್ಪಾಸ್ ನಿರ್ಮಾಣದ ಬಗ್ಗೆ ಸಮಗ್ರ ವರದಿಯನ್ನು ತಯಾರಿಸಬೇಕು ಮತ್ತು ಗುರುನರಸಿಂಹ ದೇವಸ್ಥಾನದ ರಥ ಹಬ್ಬದ ಸಮಯದಲ್ಲಿ ಆಕಡೆಯಿಂದ ಈಕಡೆಗೆ ಸಾಗಿಸಲು ಸಾಧ್ಯವಾಗುವಂತೆ ಅಂಡರ್ಪಾಸ್ ನಿರ್ಮಾಣವನ್ನು ಮಾಡಬೇಕು ಎಂದು ಸಭೆಗೆ ತಿಳಿಸಿದರು.
ಮಳೆಗಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡ ಗುಂಡಿಗಳನ್ನು ಸರಿಪಡಿಸುವಿಕೆ, ಹೆಜಮಾಡಿಯಿಂದ ಕುಂದಾಪುರವರೆಗಿನ ದಾರಿದೀಪಗಳ ಸರಿಪಡಿಸುವಿಕೆ, ಕುಂದಾಪುರ ಮತ್ತು ಕೋಟ ಭಾಗದಲ್ಲಿನ ಅಪಘಾತ ವಲಯ ಗುರುತಿಸುವಿಕೆ ಮತ್ತು ಸೂಕ್ತ ನಿರ್ವಹಣೆಯ ಬಗ್ಗೆ ಸಭೆಗೆ ತಿಳಿಸಿದರು.
ಉಡುಪಿ ಜಿಲ್ಲಾ ಪತ್ರಕರ್ತರಿಗೆ ಈ ಮೊದಲು ನೀಡಿದಂತೆ, ಸಾಸ್ತಾನ ಟೋಲ್ಗೇಟ್ನಲ್ಲಿ ಉಚಿತ ಪಾಸ್ ನೀಡಬೇಕೆಂದು ಸಭೆಗೆ ಸಂಸದ ಕೋಟ ಸೂಚಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿಯವರಾದ ಟಿ.ಕೆ ಸ್ವರೂಪ, ಕುಂದಾಪುರ ಉಪವಿಭಾಗಾಧಿಕಾರಿಯಾದ ಕೆ. ರಶ್ಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶ್ರೀ ಜಾವೇದ್, ಪ್ರಾಧಿಕಾರದ ಇಂಜಿನಿಯರ್ ಮತ್ತು ಇತರ ಕಾಮಗಾರಿಗಳ ಗುತ್ತಿಗೆದಾರರು ಹಾಜರಿದ್ದರು.