ಉಡುಪಿ:ಮಳೆಗಾಲವಾಗಿದ್ದರೂ ವಾರಾಂತ್ಯದಲ್ಲಿ ಸಮುದ್ರ ಕಿನಾರೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿಲ್ಲ. ಮಲ್ಪೆ ಬೀಚ್ ನಲ್ಲಿ ಈಜದಂತೆ ಕಟ್ಟೆಚ್ಚರ ವಹಿಸಿರುವ ನಡುವೆ ಸಮೀಪದ ಬೀಚ್ ಗಳಿಗೆ ಹೋಗಿ ಪ್ರವಾಸಿಗರು ಸಮುದ್ರದ ಪ್ರಕ್ಷುಬ್ಧತೆ ಲೆಕ್ಕಿಸದೆ ಈಜಾಡುತ್ತಿದ್ದಾರೆ.
ಹೂಡೆ ಸಮೀಪದ ಬೀಚ್ ನಲ್ಲಿ ವಾರಾಂತ್ಯದಲ್ಲಿ ಬಹಳಷ್ಟು ಪ್ರವಾಸಿಗರು ಆಗಮಿಸುತ್ತಿದ್ದು ಕೆಲವೊಂದು ಪ್ರವಾಸಿಗ ಯುವಕರು ಸಮುದ್ರಕ್ಕಿಳಿದು ಈಜಾಡುವ ದೃಶ್ಯ ಭಾನುವಾರ ಕಂಡು ಬಂತು. ಈ ಸಂದರ್ಭದಲ್ಲಿ ಪೊಲೀಸರು ಬಂದು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದರು. ಅದರ ಹೊರತಾಗಿಯೂ ಪ್ರವಾಸಿಗರು ಸಮುದ್ರದ ಅಲೆಗಳೊಂದಿಗೆ ಸೆಣಸಾಟ ನಡೆಸುತ್ತಿದ್ದಾರೆ.
ಈಗಾಗಲೇ ಕರಾವಳಿಯಲ್ಲಿ ತೀವ್ರ ಗಾಳಿ-ಮಳೆಯ ಸುರಿಯುತ್ತಿದ್ದು ಇಂದು ಮಳೆಗೆ ಸ್ವಲ್ಪ ಬಿಡುವು ಸಿಕ್ಕಿತ್ತು. ಈ ಬಿಡುವಿನ ವೇಳೆಯಲ್ಲಿ ಸಮುದ್ರ ಕಿನಾರೆಗೆ ಲಗ್ಗೆ ಇಟ್ಟಿರುವ ಪ್ರವಾಸಿಗರು ಪ್ರಕ್ಷುಬ್ಧಗೊಂಡಿರುವ ಸಮುದ್ರಕ್ಕಿಳಿದು ದುಸ್ಸಹಾಸ ಮಾಡುತ್ತಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಅಲೆಗಳು ಎಳೆದುಕೊಂಡು ಹೋಗಿ ಸಮುದ್ರ ಪಾಲಾಗಿರುವ ಭೀತಿ ಇದ್ದೆ ಇದೆ. ಮಳೆಗಾಲದಲ್ಲಿ ಸಮುದ್ರ ಕಿನಾರೆಗೆ ಆಗಮಿಸುವ ಪ್ರವಾಸಿಗರು ಜೀವನದೊಂದಿಗೆ ಚೆಲ್ಲಾಟವಾಡಿ ಪ್ರಕ್ಷುಬ್ಧ ಸಮುದ್ರಕ್ಕೆ ಇಳಿಯಬಾರದೆಂಬುವುದು ಸಾರ್ವಜನಿಕರ ಅಭಿಪ್ರಾಯ.